ಪರಿವಿಡಿ:
ಸಾಮಾನ್ಯ ಅಧ್ಯಯನ ಪತ್ರಿಕೆ 1:
1. ಅಬನೀಂದ್ರನಾಥ ಟ್ಯಾಗೋರ್.
ಸಾಮಾನ್ಯ ಅಧ್ಯಯನ ಪತ್ರಿಕೆ 2:
1. ಸಾರ್ವಜನಿಕ ಲೆಕ್ಕಪತ್ರ ಸಮಿತಿ.
2. ಹೊಸ ಮಾಹಿತಿ ತಂತ್ರಜ್ಞಾನ (ಐಟಿ) ನಿಯಮಗಳು.
3. ಸಿಂಗಾಪುರ ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರದಲ್ಲಿ (SIAC) ತುರ್ತು ಮಧ್ಯಸ್ಥಿಕೆದಾರ ಯಾರು?
4. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಏಕೆ ಖಾಯಂ ಸ್ಥಾನ ನೀಡಬೇಕು?
ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:
1. ಕೇಂದ್ರೀಯ ವಿಶ್ವವಿದ್ಯಾಲಯ (ತಿದ್ದುಪಡಿ) ಮಸೂದೆ 2021.
2. ಖೇಲ್ ರತ್ನಕ್ಕೆ ಧ್ಯಾನ್ ಚಂದ್ ಹೆಸರಿಡಲಾಗಿದೆ.
3. ಹಿಜ್ಬುಲ್ಲಾ
4. ಪಾನಿ ಮಾಹ್.
ಸಾಮಾನ್ಯ ಅಧ್ಯಯನ ಪತ್ರಿಕೆ : 1
ವಿಷಯಗಳು: 18ನೇ ಶತಮಾನದ ಮಧ್ಯಭಾಗದಿಂದ ಇಂದಿನವರೆಗೆ ಆಧುನಿಕ ಭಾರತದ ಇತಿಹಾಸ-ಮಹತ್ವದ ಘಟನೆಗಳು ವ್ಯಕ್ತಿಗಳು ಮತ್ತು ಸಮಸ್ಯೆಗಳು.
ಅಬನೀಂದ್ರನಾಥ ಟ್ಯಾಗೋರ್:
(Abanindranath Tagore)
ಸಂದರ್ಭ:
ಆಗಸ್ಟ್ 7: ಅಬನೀಂದ್ರನಾಥ ಟ್ಯಾಗೋರ್ ಅವರ 150 ನೇ ಜನ್ಮ ದಿನಾಚರಣೆ.
ಅಬನೀಂದ್ರನಾಥ ಟ್ಯಾಗೋರ್ ಬಗ್ಗೆ:
ರವೀಂದ್ರನಾಥ ಟ್ಯಾಗೋರರ ಸೋದರಳಿಯ ಅಬನೀಂದ್ರನಾಥ ಟ್ಯಾಗೋರ್, ಭಾರತದ ಬಂಗಾಳದ ಕಲಾ ಶಾಲೆಯ ಪ್ರಮುಖ ಕಲಾವಿದರಲ್ಲಿ ಒಬ್ಬರಾಗಿದ್ದರು. ಅವರು ಭಾರತೀಯ ಕಲೆಯಲ್ಲಿ ಸ್ವದೇಶಿ ಮೌಲ್ಯಗಳ ಮೊದಲ ಪ್ರಮುಖ ಸಮರ್ಥಕರಾಗಿದ್ದರು.
ಭಾರತೀಯ ಕಲೆ ಮತ್ತು ಸಂಸ್ಕೃತಿಗೆ ಅಬನೀಂದ್ರನಾಥ ಟ್ಯಾಗೋರ್ ರವರ ಕೊಡುಗೆಗಳು:
- ಅವರು ಮೊದಲು ‘ಇಂಡಿಯನ್ ಸೊಸೈಟಿ ಆಫ್ ಓರಿಯಂಟಲ್ ಆರ್ಟ್’ ಅನ್ನು ರಚಿಸಿದರು ಮತ್ತು ನಂತರ ಬೆಂಗಾಲ್ ಸ್ಕೂಲ್ ಆಫ್ ಆರ್ಟ್ ಅನ್ನು ಸ್ಥಾಪಿಸಿದರು.
- ಅವರು ಭಾರತೀಯ ಕಲೆ ಮತ್ತು ಅದರ ಕಲಾ ಪ್ರಕಾರಗಳು ಆಧ್ಯಾತ್ಮಿಕತೆಗೆ ಪ್ರಾಮುಖ್ಯತೆ ನೀಡುತ್ತವೆ ಎಂದು ನಂಬಿದ್ದರು ಅವರ ಈ ನಂಬಿಕೆಯು ಭೌತವಾದವನ್ನು ಒತ್ತಿಹೇಳುವ ಪಾಶ್ಚಾತ್ಯತೆಗೆ ವಿರುದ್ಧವಾಗಿತ್ತು, ಹೀಗಾಗಿ ಅವರು ಪಾಶ್ಚಾತ್ಯ ಕಲೆಯನ್ನು ತಿರಸ್ಕರಿಸಿದರು.
- ಮೊಘಲ್ ಮತ್ತು ರಜಪೂತ ವರ್ಣಚಿತ್ರಗಳನ್ನು ಆಧುನೀಕರಿಸುವ ಅವರ ಕಲ್ಪನೆಯು ಅಂತಿಮವಾಗಿ ಆಧುನಿಕ ಭಾರತೀಯ ಚಿತ್ರಕಲೆಯ ಉದಯಕ್ಕೆ ಕಾರಣವಾಯಿತು, ಇದು ಅವರ ಬಂಗಾಳ ಕಲಾ ಶಾಲೆಯಲ್ಲಿ ಅಭಿವೃದ್ಧಿಗೊಂಡಿತು.
- ಅವರ ಹೆಚ್ಚಿನ ಕೃತಿಗಳು ಹಿಂದೂ ತತ್ವಶಾಸ್ತ್ರದಿಂದ ಪ್ರೇರಿತವಾಗಿವೆ.
- ಅವರ ನಂತರದ ಕೃತಿಗಳಲ್ಲಿ, ಅಬನೀಂದ್ರನಾಥರು ಚೈನೀಸ್ ಮತ್ತು ಜಪಾನೀಸ್ ಕ್ಯಾಲಿಗ್ರಫಿ ಸಂಪ್ರದಾಯಗಳನ್ನು ತಮ್ಮ ಶೈಲಿಯಲ್ಲಿ ಸಂಯೋಜಿಸಲು ಆರಂಭಿಸಿದರು. ಈ ಕ್ರಮದ ಹಿಂದಿನ ಉದ್ದೇಶವೆಂದರೆ ಆಧುನಿಕ ಪ್ಯಾನ್-ಏಷ್ಯನ್ ಕಲಾತ್ಮಕ ಸಂಪ್ರದಾಯ ಮತ್ತು ಪೂರ್ವದ ಕಲಾತ್ಮಕ ಮತ್ತು ಆಧ್ಯಾತ್ಮಿಕ ಸಂಸ್ಕೃತಿಯ ಸಾಮಾನ್ಯ ಅಂಶಗಳನ್ನು ಸಂಯೋಜಿಸುವುದಾಗಿತ್ತು.
ಪ್ರಸಿದ್ಧ ವರ್ಣಚಿತ್ರಗಳು:
ಭಾರತ ಮಾತಾ, ದಿ ಪಾಸಿಂಗ್ ಆಫ್ ಷಹಜಹಾನ್ (1900), ಮೈ ಮದರ್ (1912-13), ಫೇರಿಲ್ಯಾಂಡ್ ಇಲ್ಲಸ್ಟ್ರೇಷನ್ (1913), ಜರ್ನೀಸ್ ಎಂಡ್ (ಸುಮಾರು 1913).
ಸಾಹಿತ್ಯಕ್ಕೆ ಕೊಡುಗೆಗಳು:
ಅಬನೀಂದ್ರನಾಥ್ ಅವರನ್ನು ಒಬ್ಬ ವರ್ಣಚಿತ್ರಕಾರನ ಜೊತೆಗೆ ಪ್ರವೀಣ ಮತ್ತು ನಿಪುಣ ಬರಹಗಾರ ಎಂದು ಪರಿಗಣಿಸಲಾಗಿದೆ. ಅವರ ಹೆಚ್ಚಿನ ಸಾಹಿತ್ಯ ಕೃತಿಗಳು ಮಕ್ಕಳ ಮೇಲೆ ಕೇಂದ್ರೀಕೃತವಾಗಿವೆ.
- ಅವರ ಕೆಲವು ಪುಸ್ತಕಗಳಾದ ‘ಬುಡೋ ಆಂಗ್ಲಾ’, ‘ಖೈರೆಪುತುಲ್’ ಮತ್ತು ‘ರಾಜಕಹಾನಿ’ ಬಂಗಾಳಿ ಮಕ್ಕಳ ಸಾಹಿತ್ಯದ ಅತ್ಯುತ್ತಮ ಉದಾಹರಣೆಗಳಾಗಿವೆ.
- ವಿಲಿಯಂ ರೊಟೆನ್ಸ್ಟೈನ್ (William Rothenstein) ಅವರು, ರವೀಂದ್ರನಾಥ ಟ್ಯಾಗೋರ್ ಅವರಿಗೆ ‘ಗೀತಾಂಜಲಿ’ ಕೃತಿಯನ್ನು ಇಂಗ್ಲಿಷ್ನಲ್ಲಿ ಪ್ರಕಟಿಸಲು ಸಹಾಯ ಮಾಡಿದರು.
- ಅರೇಬಿಯನ್ ನೈಟ್ಸ್ ಸರಣಿಯು ಅವರ ಗಮನಾರ್ಹ ಕೃತಿಗಳಲ್ಲಿ ಒಂದಾಗಿದೆ.
ಸಾಮಾನ್ಯ ಅಧ್ಯಯನ ಪತ್ರಿಕೆ : 2
ವಿಷಯಗಳು: ಸಂಸತ್ತು ಮತ್ತು ರಾಜ್ಯ ಶಾಸಕಾಂಗಗಳು – ರಚನೆ, ಕಾರ್ಯವೈಖರಿ, ವ್ಯವಹಾರದ ನಡಾವಳಿಗಳು, ಅಧಿಕಾರಗಳು ಮತ್ತು ಸವಲತ್ತುಗಳು ಮತ್ತು ಇವುಗಳಿಂದ ಉಂಟಾಗುವ ಸಮಸ್ಯೆಗಳು.
ಸಾರ್ವಜನಿಕ ಲೆಕ್ಕಪತ್ರ ಸಮಿತಿ (PAC):
(Public Accounts Committee)
ಸಂದರ್ಭ:
ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ನೇತೃತ್ವದ ಸಾರ್ವಜನಿಕ ಲೆಕ್ಕಪತ್ರ ಸಮಿತಿಯು (Public Accounts Committe – PAC) ಶ್ರೀನಗರ, ಕಾರ್ಗಿಲ್, ಲೇಹ್ ಮತ್ತು ಡ್ರಾಸ್ನಲ್ಲಿ ನಾಲ್ಕು ದಿನಗಳ ಪ್ರವಾಸ ಕೈಗೊಳ್ಳುತ್ತಿದೆ.
ಏನಿದು ಪ್ರಕರಣ?
ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಈ ಭೇಟಿಯು, ಸೇನಾ ಸಿಬ್ಬಂದಿಗೆ “ಹೆಚ್ಚಿನ ಎತ್ತರದ ಪ್ರದೇಶದಲ್ಲಿ ಸೂಕ್ತವಾದ ತೊಡುವ ಬಟ್ಟೆ, ಸಲಕರಣೆ, ಪಡಿತರ ಮತ್ತು ವಸತಿ” ಕುರಿತು ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (CAG) ರವರ 2019 ರ ವರದಿಗೆ ಸಂಬಂಧಿಸಿದೆ.
CAG ವರದಿಯು, ಎತ್ತರದ ಪ್ರದೇಶಗಳಲ್ಲಿ ಸೂಕ್ತವಾದ ತೊಡುವ ಬಟ್ಟೆ ಮತ್ತು ಸಲಕರಣೆಗಳ ಖರೀದಿಯಲ್ಲಿನ 4 ವರ್ಷಗಳ ವಿಳಂಬವನ್ನು ಎತ್ತಿ ತೋರಿಸಿದೆ, ಈ ಕಾರಣದಿಂದಾಗಿ ದೇಶದ ಸೇನೆಯು ಅಗತ್ಯ ಬಟ್ಟೆ ಮತ್ತು ಸಲಕರಣೆಗಳ ತೀವ್ರ ಕೊರತೆಯನ್ನು ಎದುರಿಸಬೇಕಾಯಿತು.
ಸಾರ್ವಜನಿಕ ಲೆಕ್ಕಪತ್ರ ಸಮಿತಿ ಕುರಿತು:
- ಸಾರ್ವಜನಿಕ ಲೆಕ್ಕಪತ್ರ ಸಮಿತಿಯನ್ನು ವಾರ್ಷಿಕವಾಗಿ ರಚಿಸಲಾಗುತ್ತದೆ. ಇದರಲ್ಲಿ ಗರಿಷ್ಠ ಸದಸ್ಯರ ಸಂಖ್ಯೆ 22 ಆಗಿದ್ದು, ಈ ಪೈಕಿ 15 ಸದಸ್ಯರನ್ನು ಲೋಕಸಭೆಯಿಂದ ಮತ್ತು 7 ಸದಸ್ಯರನ್ನು ರಾಜ್ಯಸಭೆಯಿಂದ ಆಯ್ಕೆ ಮಾಡಲಾಗುತ್ತದೆ.
- ಸಮಿತಿಯ ಸದಸ್ಯರ ಅಧಿಕಾರ ಅವಧಿ ಒಂದು ವರ್ಷ.
- ಸಮಿತಿಯ ಅಧ್ಯಕ್ಷರನ್ನು ಲೋಕಸಭೆಯ ಸ್ಪೀಕರ್ ನೇಮಕ ಮಾಡುತ್ತಾರೆ. 1967 ರಿಂದ,ಪ್ರತಿಪಕ್ಷದ ಸದಸ್ಯರನ್ನು ಸಮಿತಿಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗುತ್ತದೆ.
- ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (CAG) ಯ ಲೆಕ್ಕಪರಿಶೋಧನಾ ವರದಿಯನ್ನು ಸಂಸತ್ತಿನಲ್ಲಿ ಮಂಡಿಸಿದ ನಂತರ ಅದನ್ನು ಪರಿಶೀಲಿಸುವುದು ಇದರ ಮುಖ್ಯ ಕಾರ್ಯವಾಗಿದೆ.
ಐತಿಹಾಸಿಕ ಹಿನ್ನೆಲೆ:
ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ಸದನದ ಸಮಿತಿಗಳಲ್ಲಿ ಅತ್ಯಂತ ಹಳೆಯದು. ಮೊಂಟಾಗು-ಚೆಲ್ಮ್ಸ್ಫೋರ್ಡ್ ಸುಧಾರಣೆಗಳ ಹಿನ್ನೆಲೆಯಲ್ಲಿ ಸಾರ್ವಜನಿಕ ಲೆಕ್ಕಪತ್ರ ಸಮಿತಿಯನ್ನು ಮೊದಲು 1921 ರಲ್ಲಿ ರಚಿಸಲಾಯಿತು.
ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಮಿತಿಗಳು:
- ವಿಶಾಲವಾಗಿ ಹೇಳುವುದಾದರೆ, ಇದು ನೀತಿ ನಿರೂಪಣೆ ಪ್ರಶ್ನೆಗಳಲ್ಲಿ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ.
- ಖರ್ಚು ಮಾಡಿದ ನಂತರವೇ ಇದು ಇವುಗಳನ್ನು ಮೇಲ್ವಿಚಾರಣೆ ಮಾಡಬಹುದು. ಖರ್ಚನ್ನು ಮಿತಿಗೊಳಿಸುವ ಅಧಿಕಾರ ಇದಕ್ಕೆ ಇಲ್ಲ.
- ಇದು ದಿನನಿತ್ಯದ ಆಡಳಿತದ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ.
- ಸಮಿತಿ ಮಾಡಿದ ಶಿಫಾರಸುಗಳು ಕೇವಲ ಸಲಹಾತ್ಮಕ ರೂಪದಲ್ಲಿರುತ್ತವೆ. ಈ ಶಿಫಾರಸುಗಳನ್ನು ಸಚಿವಾಲಯಗಳು ಸಹ ನಿರ್ಲಕ್ಷಿಸಬಹುದು.
- ಇದಕ್ಕೆ ಇಲಾಖೆಗಳ ವೆಚ್ಚವನ್ನು ನಿರ್ಬಂಧಿಸುವ ಅಧಿಕಾರವಿಲ್ಲ.
- ಇದು ಕೇವಲ ಕಾರ್ಯಕಾರಿ ಸಂಸ್ಥೆಯಾಗಿದ್ದು ಯಾವುದೇ ಆದೇಶಗಳನ್ನು ಹೊರಡಿಸುವ ಅಧಿಕಾರವನ್ನು ಹೊಂದಿಲ್ಲ. ಸಂಸತ್ತು ಮಾತ್ರ ಅದರ ಸಂಶೋಧನೆಗಳ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಬಹುದು.
ವಿಷಯಗಳು: ಸರ್ಕಾರದ ನೀತಿಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿನ ಅಭಿವೃದ್ಧಿಯ ಅಡಚಣೆಗಳು ಮತ್ತು ಅವುಗಳ ವಿನ್ಯಾಸ ಮತ್ತು ಅನುಷ್ಠಾನದಿಂದ ಉಂಟಾಗುವ ಸಮಸ್ಯೆಗಳು.
ಹೊಸ ಮಾಹಿತಿ ತಂತ್ರಜ್ಞಾನ (ಐಟಿ) ನಿಯಮಗಳು:
(The new Information Technology (IT) Rules)
ಸಂದರ್ಭ:
ಇತ್ತೀಚಿಗೆ,ಹೊಸ ಮಾಹಿತಿ ತಂತ್ರಜ್ಞಾನ (ಐಟಿ) ನಿಯಮಗಳ (new Information Technology (IT) Rules) ಅನುಸಾರವಾಗಿ ಸಾಮಾಜಿಕ ಮಾಧ್ಯಮ ಕಂಪನಿ ಯಾದ ಟ್ವಿಟ್ಟರ್ ಶಾಶ್ವತ ಮುಖ್ಯ ಅನುಸರಣೆ ಅಧಿಕಾರಿ (Chief Compliance Officer -CCO), ನಿವಾಸಿ ಕುಂದುಕೊರತೆ ಅಧಿಕಾರಿ (Resident Grievance Officer -RGO) ಮತ್ತು ನೋಡಲ್ ಸಂಪರ್ಕ ವ್ಯಕ್ತಿಯನ್ನು (Nodal Contact Person) ನೇಮಿಸಿದೆ.
ಏನಿದು ಪ್ರಕರಣ?
ಇತ್ತೀಚೆಗೆ, ಸುಪ್ರೀಂ ಕೋರ್ಟ್ಗೆ, ಸಲ್ಲಿಸಿದ ತನ್ನ ಅಫಿಡವಿಟ್ನಲ್ಲಿ ಟ್ವಿಟ್ಟರ್, ಮುಖ್ಯ ಅನುಸರಣೆ ಅಧಿಕಾರಿಯ (CCO) ನೇಮಕಾತಿಯ ಸ್ಥಿತಿಯನ್ನು “ಮಧ್ಯಂತರ”(interim) ದಿಂದ “ಆಕಸ್ಮಿಕ”(contingent) ಕ್ಕೆ ಬದಲಾಯಿಸಿರುವ ಕುರಿತು ಸುಪ್ರೀಂಕೋರ್ಟ್ ವಿರೋಧ ವ್ಯಕ್ತಪಡಿಸಿತ್ತು.
ಐಟಿ ನಿಯಮಗಳ ಪ್ರಕಾರ, ಹಿರಿಯ ಉದ್ಯೋಗಿಯನ್ನು CCO ಆಗಿ ನೇಮಿಸುವುದನ್ನು ಕಡ್ಡಾಯಗೊಳಿಸಲಾಗಿದೆ, ಆದರೆ ಟ್ವಿಟರ್ ಮೂರನೇ ಪಕ್ಷದ ಗುತ್ತಿಗೆದಾರರ ಮೂಲಕ “ಆಕಸ್ಮಿಕ ಕೆಲಸಗಾರ” ನನ್ನು COO ಹುದ್ದೆಗೆ ನೇಮಿಸಿತು. ಟ್ವಿಟರ್ ನ ಈ ಕ್ರಮವನ್ನು ಕೇಂದ್ರ ಸರಕಾರವು ವಿರೋಧಿಸಿದೆ.
ನಿಯಮಗಳು ಏನು ಹೇಳುತ್ತವೆ?
ಟ್ವಿಟರ್ ಇಂಕ್ ಐಟಿ ಕಾಯ್ದೆ 2000 ರ ಸೆಕ್ಷನ್ 2 (1) (ಡಬ್ಲ್ಯೂ) ಮತ್ತು ಐಟಿ ರೂಲ್ಸ್ 2021 ರ ಅಡಿಯಲ್ಲಿ ಮಹತ್ವದ ಸಾಮಾಜಿಕ ಮಾಧ್ಯಮ ಮಧ್ಯವರ್ತಿ (Significant Social Media Intermediary) ಯ ಒಂದು ಅರ್ಥದಲ್ಲಿ ‘ಮಧ್ಯವರ್ತಿ’ ಆಗಿದೆ.
- SSMI ಗಳು ಮುಖ್ಯ ಅನುಸರಣೆ ಅಧಿಕಾರಿ, ನೋಡಲ್ ಅಧಿಕಾರಿ ಮತ್ತು ಕುಂದುಕೊರತೆ ಅಧಿಕಾರಿಯನ್ನು ನೇಮಿಸುವ ಅಗತ್ಯವಿದೆ –ಐಟಿ ನಿಯಮಗಳ ಪ್ರಕಾರ ಇವರೆಲ್ಲರೂ ಭಾರತದ ನಿವಾಸಿಗಳಾಗಿರಬೇಕು.
ಪರಿಣಾಮಗಳು:
- ಈ ನಿಯಮಗಳನ್ನು ಅನುಸರಣೆ ಮಾಡದಿರುವುದು ಐಟಿ ನಿಯಮಗಳ ನಿಬಂಧನೆಗಳ ಉಲ್ಲಂಘನೆಯಾಗಿದೆ, ಇದು ಟ್ವಿಟರ್ “ಮಧ್ಯವರ್ತಿ” ಯಾಗಿ ತನ್ನ ಪ್ರತಿರಕ್ಷೆಯನ್ನು ಕಳೆದುಕೊಳ್ಳಲು ಕಾರಣವಾಗುತ್ತದೆ.
- ‘ಮಧ್ಯವರ್ತಿ’ ಸ್ಥಿತಿಯು ಟ್ವಿಟರ್ ತನ್ನ ಪ್ಲಾಟ್ಫಾರ್ಮ್ನಲ್ಲಿನ ಯಾವುದೇ ಮೂರನೇ ವ್ಯಕ್ತಿಯ ಡೇಟಾದ ಮೇಲೆ ಹೊಣೆಗಾರಿಕೆಯಿಂದ ವಿನಾಯಿತಿ ನೀಡುತ್ತದೆ. ಈ ಸ್ಥಿತಿಯನ್ನು ಮುಕ್ತಾಯಗೊಳಿಸಿದ ನಂತರ, ದೂರುಗಳಿಗೆ ಸಂಬಂಧಿಸಿದಂತೆ ಕ್ರಿಮಿನಲ್ ಕ್ರಮಕ್ಕೆ ಟ್ವಿಟರ್ ಹೊಣೆಗಾರನಾಗುತ್ತಾನೆ.
ಹಿನ್ನೆಲೆ:
ಫೆಬ್ರವರಿ 25 ರಂದು,ಕೇಂದ್ರವು ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಸಂಸ್ಥೆಗಳಿಗೆ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮೀಡಿಯಾ ನೀತಿ ಸಂಹಿತೆ) ನಿಯಮಗಳು 2021 (the Information Technology (Intermediary Guidelines and Digital Media Ethics Code) Rules 2021) ಅನ್ನು ಮಾಹಿತಿ ತಂತ್ರಜ್ಞಾನ ಕಾಯ್ದೆ 2000 ರ ಸೆಕ್ಷನ್ 87 (2) ರ ಅಡಿಯಲ್ಲಿ ಅಧಿಕಾರವನ್ನು ಚಲಾಯಿಸುವ ಮೂಲಕ ಮತ್ತು ಹಿಂದಿನ ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು) ನಿಯಮಗಳು 2011 (Information Technology (Intermediary Guidelines) Rules 2011),ಅನ್ನು ಬದಲಾಯಿಸುವ ಮೂಲಕ ರೂಪಿಸಿತು. ಇದು ಮೇ 26 ರಿಂದ ಜಾರಿಗೆ ಬರಲಿದೆ.
ಹೊಸ ನಿಯಮಗಳ ಅವಲೋಕನ:
- ಇದು OTT ಸೇವಾ ಪೂರೈಕೆದಾರರು ಮತ್ತು ಡಿಜಿಟಲ್ ಪೋರ್ಟಲ್ ಗಳಿಗೆ ಕುಂದುಕೊರತೆ ನಿವಾರಣಾ ವ್ಯವಸ್ಥೆ ಯನ್ನು ರೂಪಿಸುವುದನ್ನು ಕಡ್ಡಾಯಗೊಳಿಸುತ್ತದೆ. ಸಾಮಾಜಿಕ ಮಾಧ್ಯಮದ ದುರುಪಯೋಗದ ವಿರುದ್ಧ ತಮ್ಮ ಕುಂದುಕೊರತೆಗಳನ್ನು ವ್ಯಕ್ತಪಡಿಸಲು ಸೋಶಿಯಲ್ ಮೀಡಿಯಾದ ಗ್ರಾಹಕರಿಗೆ ಇದು ಅತ್ಯವಶ್ಯಕವಾಗಿದೆ.
- ಮಹತ್ವದ ಸಾಮಾಜಿಕ ಮಾಧ್ಯಮ ಸಂಸ್ಥೆಗಳು ಮುಖ್ಯ ಅನುಸರಣೆ ಅಧಿಕಾರಿಯನ್ನು(chief compliance officer) ನೇಮಿಸುವುದು ಸಹ ಕಡ್ಡಾಯವಾಗಿರುತ್ತದೆ ಮತ್ತು ಕಾನೂನು ಜಾರಿ ಸಂಸ್ಥೆಗಳೊಂದಿಗೆ 24 × 7 ಸಮನ್ವಯಕ್ಕಾಗಿ ಸಾಮಾಜಿಕ ಮಾಧ್ಯಮ ಮಧ್ಯವರ್ತಿಗಳು (social media intermediaries ) ನೋಡಲ್ ಸಂಪರ್ಕ ವ್ಯಕ್ತಿಯನ್ನು (nodal contact person)ನೇಮಿಸುವುದು ಕಡ್ಡಾಯವಾಗಿರುತ್ತದೆ.
- ಕುಂದುಕೊರತೆ ನಿವಾರಣಾ ಅಧಿಕಾರಿ: ಸಾಮಾಜಿಕ ಮಾಧ್ಯಮ ಸಂಸ್ಥೆಗಳು ದೂರುಗಳನ್ನು ನಿರ್ವಹಿಸಲು ಕುಂದುಕೊರತೆ ನಿವಾರಣಾ ಅಧಿಕಾರಿಯನ್ನು ನೇಮಿಸಬೇಕಾಗುತ್ತದೆ. ಅವರು ದೂರನ್ನು 24 ಗಂಟೆಗಳ ಒಳಗೆ ದಾಖಲಿಸಿಕೊಂಡು 15 ದಿನಗಳಲ್ಲಿ ವಿಲೇವಾರಿ ಮಾಡಬೇಕಾಗುತ್ತದೆ.
- ವಿಷಯವನ್ನು ತೆಗೆದುಹಾಕುವುದು: ಬಳಕೆದಾರರ ಘನತೆಗೆ ವಿರುದ್ಧವಾಗಿ, ವಿಶೇಷವಾಗಿ ಮಹಿಳೆಯರ – ಬಹಿರಂಗಗೊಂಡ ಅವರ ವೈಯಕ್ತಿಕ ಖಾಸಗಿ ಅಂಗಗಳ ಬಗ್ಗೆ ಅಥವಾ ನಗ್ನತೆ ಅಥವಾ ಲೈಂಗಿಕ ಕ್ರಿಯೆ ಅಥವಾ ಸೋಗು ಹಾಕುವಿಕೆ ಇತ್ಯಾದಿಗಳ ಬಗ್ಗೆ ದೂರುಗಳಿದ್ದರೆ – ದೂರು ನೀಡಿದ 24 ಗಂಟೆಗಳ ಒಳಗೆ ಅದನ್ನು ತೆಗೆದುಹಾಕಲು ಸಾಮಾಜಿಕ ಮಾಧ್ಯಮ ವೇದಿಕೆಗಳು ಕ್ರಮಕೈಗೊಳ್ಳುವುದು ಅಗತ್ಯವಾಗಿರುತ್ತದೆ.
- ಮಾಸಿಕ ವರದಿ: ಸ್ವೀಕರಿಸಿದ ಒಟ್ಟು ದೂರುಗಳ ಸಂಖ್ಯೆ ಮತ್ತು ಪರಿಹಾರದ ಸ್ಥಿತಿಯ ಬಗ್ಗೆ ಅವರು ಮಾಸಿಕ ವರದಿಯನ್ನು ಪ್ರಕಟಿಸಬೇಕಾಗುತ್ತದೆ.
- ಸುದ್ದಿ ಪ್ರಕಾಶಕರಿಗೆ ಮೂರು ಹಂತದ ನಿಯಂತ್ರಣ ಇರುತ್ತದೆ – ಸ್ವಯಂ ನಿಯಂತ್ರಣ,ನಿವೃತ್ತ ನ್ಯಾಯಾಧೀಶರು ಅಥವಾ ಶ್ರೇಷ್ಠ ವ್ಯಕ್ತಿಯ ನೇತೃತ್ವದ ಸ್ವಯಂ-ನಿಯಂತ್ರಕ ಸಂಸ್ಥೆ, ಮತ್ತು ಅಭ್ಯಾಸಗಳ ಸಂಹಿತೆಗಳು ಮತ್ತು ಕುಂದುಕೊರತೆ ನಿವಾರಣಾ ಸಮಿತಿ ಸೇರಿದಂತೆ,ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಮೇಲ್ವಿಚಾರಣೆ.
ಮಹತ್ವದ ಸಾಮಾಜಿಕ ಮಾಧ್ಯಮ ಮಧ್ಯವರ್ತಿ ಸಂಸ್ಥೆಗಳು ಎಂದರೇನು? ಮತ್ತು ಅದರ ಅಡಿಯಲ್ಲಿ ಪಡೆದ ಲಾಭಗಳು ಯಾವುವು?
ಹೊಸ ಮಾನದಂಡಗಳ ಪ್ರಕಾರ, 50 ಲಕ್ಷಕ್ಕೂ ಹೆಚ್ಚು ನೋಂದಾಯಿತ ಬಳಕೆದಾರರನ್ನು ಹೊಂದಿರುವ ಸಾಮಾಜಿಕ ಮಾಧ್ಯಮ ಕಂಪನಿಗಳನ್ನು ‘ಮಹತ್ವದ ಸಾಮಾಜಿಕ ಮಾಧ್ಯಮ ಮಧ್ಯವರ್ತಿಗಳು’ ಎಂದು ಪರಿಗಣಿಸಲಾಗುತ್ತದೆ.
ಹೊಸ ನಿಯಮಗಳನ್ನು ಅನುಸರಿಸದಿದ್ದರೆ ಆಗುವ ಪರಿಣಾಮಗಳು:
- ಸಾಮಾಜಿಕ ಮಾಧ್ಯಮ ದೈತ್ಯ ಸಂಸ್ಥೆಗಳಾದ ಫೇಸ್ಬುಕ್, ಟ್ವಿಟರ್, ಇನ್ಸ್ಟಾಗ್ರಾಮ್ ಮತ್ತು ವಾಟ್ಸಾಪ್ ಮೆಸೆಂಜರ್ ಹೊಸ ಮಾಹಿತಿ ತಂತ್ರಜ್ಞಾನ ನಿಯಮಗಳನ್ನು ಪಾಲಿಸದಿದ್ದರೆ ನಿಷೇಧವನ್ನು(could face a ban) ಎದುರಿಸಬೇಕಾಗುತ್ತದೆ.
- ಅವರು “ಸಾಮಾಜಿಕ ಮಾಧ್ಯಮ ಮಧ್ಯವರ್ತಿಗಳು” ಎಂಬ ಸ್ಥಾನಮಾನವನ್ನು ಕಳೆದುಕೊಳ್ಳುವ ಅಪಾಯವನ್ನು ಸಹ ಎದುರಿಸಬೇಕಾಗುತ್ತದೆ ಮತ್ತು ಅವರು ಪರಿಷ್ಕೃತ ನಿಯಮಗಳನ್ನು ಪಾಲಿಸದಿದ್ದರೆ ಕ್ರಿಮಿನಲ್ ಕ್ರಮಗಳನ್ನು ಎದುರಿಸಲು ಹೊಣೆಗಾರರಾಗಬಹುದು.
ಸಂಬಂಧಿತ ಕಳವಳಗಳು:
- ವಿಶೇಷವಾಗಿ ಸಾಂಕ್ರಾಮಿಕ ರೋಗದ ದೃಷ್ಟಿಯಿಂದ, ಹಲವು ಉದ್ಯಮ ಸಂಸ್ಥೆಗಳು ಒಂದು ವರ್ಷದವರೆಗೆ ಅನುಸರಣಾ ವಿಂಡೋಗಾಗಿ ಸರ್ಕಾರಕ್ಕೆ ಪತ್ರ ಬರೆದಿವೆ.
- ಹೊಸ ನಿಯಮಗಳ ಅಡಿಯಲ್ಲಿ ಐಟಿ ಕಾಯ್ದೆಯ ಸೆಕ್ಷನ್ 79 ರ ಅಡಿಯಲ್ಲಿ ಮಧ್ಯವರ್ತಿಗಳಿಗೆ ನೀಡಲಾಗುವ ‘ಸುರಕ್ಷಿತ ಬಂದರು’ (ಸೇಫ್ ಹಾರ್ಬರ್ ನಿಬಂಧನೆಗಳನ್ನು) ಭದ್ರತೆ ಲಭ್ಯವಿಲ್ಲದಿರುವ ಬಗ್ಗೆಯೂ ಕಳವಳ ವ್ಯಕ್ತಪಡಿಸಲಾಗಿದೆ.
- ಇದು,ಮಧ್ಯವರ್ತಿಗಳ ಅನುಸರಣೆಗಾಗಿ ನೌಕರರ ಮೇಲೆ ಕ್ರಿಮಿನಲ್ ಹೊಣೆಗಾರಿಕೆಯನ್ನು ಹೇರಲು ಕಾರಣವಾಗಬಹುದಾದ, ನಿಯಮಗಳಲ್ಲಿನ ಒಂದು ಷರತ್ತನ್ನು ಮರು-ಪರಿಶೀಲಿಸುವಂತೆ ಅವರು ವಿನಂತಿಸಿದ್ದಾರೆ, ವ್ಯವಹಾರವನ್ನು ಸುಲಭಗೊಳಿಸುವ ಹಿತದೃಷ್ಟಿಯಿಂದ ಅದನ್ನು ಕೈಬಿಡಬೇಕೆಂದು ಕೇಳಿಕೊಳ್ಳುತ್ತಾರೆ.
- ಎಂಡ್-ಟು-ಎಂಡ್ ಎನ್ಕ್ರಿಪ್ಟ್ ಮಾಡಲಾದ ಪ್ಲ್ಯಾಟ್ಫಾರ್ಮ್ಗಳಲ್ಲಿನ ಮಾಹಿತಿಯ ಮೊದಲ ಮೂಲ ವ್ಯಕ್ತಿಯ ಅಥವಾ ಒರಿಜಿನೇಟರ್ ನ ಪತ್ತೆಹಚ್ಚುವಿಕೆ ಆದೇಶವು ಸಾಮಾಜಿಕ ಮಾಧ್ಯಮ ವೇದಿಕೆಯ ಭದ್ರತಾ ವಿನ್ಯಾಸವನ್ನು ದುರ್ಬಲಗೊಳಿಸಬಹುದು. ಇದು ಇಡೀ ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ಪ್ರತಿಕೂಲ ವ್ಯಕ್ತಿಗಳಿಂದ ಸೈಬರ್ ದಾಳಿಗೆ ಗುರಿಯಾಗಿಸಬಹುದು.
- ಹೆಚ್ಚುವರಿಯಾಗಿ, ಅಸ್ತಿತ್ವದಲ್ಲಿರುವ ದತ್ತಾಂಶ ಉಳಿಸಿಕೊಳ್ಳುವ ಆದೇಶವು ಭದ್ರತಾ ಅಪಾಯಗಳು ಮತ್ತು ತಾಂತ್ರಿಕ ಸಂಕೀರ್ಣತೆಗಳ ಜೊತೆಗೆ ಭಾರತ ಮತ್ತು ವಿದೇಶಗಳಲ್ಲಿನ ಬಳಕೆದಾರರ ಗೌಪ್ಯತೆಗೆ ಅಪಾಯವನ್ನುಂಟುಮಾಡುತ್ತದೆ, ಇದು ಅಸ್ತಿತ್ವದಲ್ಲಿರುವ ಪರಿಸರ ವ್ಯವಸ್ಥೆಯೊಂದಿಗೆ ಏಕೀಕರಣದ ಮೊದಲು ಅಭಿವೃದ್ಧಿ ಮತ್ತು ಪರೀಕ್ಷೆಗೆ ಸಾಕಷ್ಟು ಸಮಯ ಬೇಕಾಗುತ್ತದೆ.
ವಿಷಯಗಳು: ಪ್ರಮುಖ ಅಂತರರಾಷ್ಟ್ರೀಯ ಸಂಸ್ಥೆಗಳು, ಏಜೆನ್ಸಿಗಳು ಮತ್ತು ವೇದಿಕೆಗಳು, ಅವುಗಳ ರಚನೆ, ಮತ್ತು ಆದೇಶ.
ಸಿಂಗಾಪುರ ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರದಲ್ಲಿ (SIAC) ತುರ್ತು ಮಧ್ಯಸ್ಥಿಕೆದಾರ ಯಾರು?
(Who is an emergency arbitrator in Singapore International Arbitration Centre (SIAC)?)
ಸಂದರ್ಭ:
ಸುಪ್ರೀಂ ಕೋರ್ಟ್ ಇ-ಕಾಮರ್ಸ್ ದೈತ್ಯ ಅಮೆಜಾನ್ ಪರವಾಗಿ ಮತ್ತು ಫ್ಯೂಚರ್ ರಿಟೇಲ್ ಲಿಮಿಟೆಡ್ (FRL) ಮತ್ತು ರಿಲಯನ್ಸ್ ರಿಟೇಲ್ ನಡುವಿನ ಸುಮಾರು 24,713 ಕೋಟಿ ರೂ.ಗಳ ವಿಲೀನ ಒಪ್ಪಂದದ ವಿರುದ್ಧವಾಗಿ ತೀರ್ಪು ನೀಡಿದೆ.
ಸಿಂಗಾಪುರ್ ಮೂಲದ ತುರ್ತು ಮಧ್ಯಸ್ಥಿಕೆ (Singapore-based Emergency Arbitrator -EA) ಕೇಂದ್ರದ ತೀರ್ಪಿನ (ಅಕ್ಟೋಬರ್ 2020 ತೀರ್ಪು) ಸಿಂಧುತ್ವ ಮತ್ತು ಜಾರಿಗೊಳಿಸುವಿಕೆಯನ್ನು ನ್ಯಾಯಾಲಯವು ಎತ್ತಿಹಿಡಿದಿದೆ, ಇದು ಭಾರತದ ಎರಡನೇ ಅತಿದೊಡ್ಡ ಆಫ್ಲೈನ್ ಚಿಲ್ಲರೆ ವ್ಯಾಪಾರ ಸಂಸ್ಥೆಯಾದ FRL ಅನ್ನು ವಿವಾದಿತ ವಹಿವಾಟನ್ನು ಮುಂದುವರಿಸದಂತೆ ನಿರ್ಬಂಧಿಸಿದೆ.
ಏನಿದು ಪ್ರಕರಣ?
(ಸೂಚನೆ: ಪ್ರಕರಣದ ಸಂಕ್ಷಿಪ್ತ ಅವಲೋಕನವನ್ನು ಮಾತ್ರ ಮಾಡಿ. ಪರೀಕ್ಷೆಯ ದೃಷ್ಟಿಕೋನದಿಂದ ಈ ಪ್ರಕರಣದ ಬಗ್ಗೆ ಯಾವುದೇ ವಿವರಣೆಯ ಅಗತ್ಯತೆಯಿಲ್ಲ).
ಫ್ಯೂಚರ್ ಗ್ರೂಪ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ನಡುವೆ ಆಗಸ್ಟ್ 2020 ರಲ್ಲಿ 24,713 ಕೋಟಿ ರೂ.ಗಳ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಆ ಮೂಲಕ ಫ್ಯೂಚರ್ ರಿಟೇಲ್ ತನ್ನ ಚಿಲ್ಲರೆ, ಸಗಟು, ಲಾಜಿಸ್ಟಿಕ್ಸ್ ಮತ್ತು ಗೋದಾಮಿನ ಘಟಕಗಳನ್ನು ರಿಲಯನ್ಸ್ ರಿಟೇಲ್ ಮತ್ತು ಫ್ಯಾಶನ್ ಶೈಲಿಗೆ ಮಾರಾಟ ಮಾಡಿತು.
- ಅಮೆಜಾನ್ ‘ಫ್ಯೂಚರ್ ಗ್ರೂಪ್’ ನ ಭಾರತೀಯ ಪಾಲುದಾರನಾಗಿದೆ.
- ‘ಫ್ಯೂಚರ್ ಗ್ರೂಪ್’ ತನ್ನ ಪ್ರತಿಸ್ಪರ್ಧಿಗೆ ಆಸ್ತಿ ಮಾರಾಟ ಮಾಡುವುದರೊಂದಿಗೆ ಪಾಲುದಾರಿಕೆ ಒಪ್ಪಂದವನ್ನು ಉಲ್ಲಂಘಿಸಿದೆ ಮತ್ತು ಅದನ್ನು ನಾಶಮಾಡಲು ಬಯಸುತ್ತದೆ ಎಂದು ಅಮೆಜಾನ್ ಹೇಳುತ್ತದೆ, ಆದರೆ ಸಾಲದ ಭಾರದಲ್ಲಿರುವ ಭಾರತೀಯ ಫ್ಯೂಚರ್ ಗುಂಪು ಈ ವಹಿವಾಟು ವಿಫಲವಾದರೆ ಅದು ನಾಶವಾಗಿ ಹೋಗುತ್ತದೆ ಎಂದು ಹೇಳುತ್ತದೆ.
ಈ ಕುರಿತು ಸುಪ್ರೀಂಕೋರ್ಟ್ ನ ತೀರ್ಪು:
SIACಯಲ್ಲಿ ತುರ್ತು ಮಧ್ಯಸ್ಥಗಾರರಿಂದ ನೀಡಲಾದ ತೀರ್ಪು “ನಿಖರವಾಗಿ ಮಧ್ಯಸ್ಥಿಕೆ ನ್ಯಾಯಮಂಡಳಿಯ ಆದೇಶದಂತೆ” ಮಧ್ಯಸ್ಥಿಕೆ ಮತ್ತು ಸಮನ್ವಯ ಕಾಯಿದೆ, 1996 ರ ಕಾಯಿದೆಯ 17 ನೇ ಪರಿಚ್ಛೇದದ ಅಡಿಯಲ್ಲಿ ಪರಿಗಣಿಸಲಾಗಿದೆ. ಆದುದರಿಂದ, ತುರ್ತು ಮಧ್ಯಸ್ಥಿಕೆ ಕೇಂದ್ರವು (EA) ನೀಡಿದ ತೀರ್ಪು ಕಾಯಿದೆಯ ಸೆಕ್ಷನ್ 17 (1) (ಮಧ್ಯಸ್ಥಿಕೆ ನ್ಯಾಯಾಧೀಕರಣದ ಮೂಲಕ ಆದೇಶಿಸಲಾಗಿದೆ ಅಂತಿಮ ತೀರ್ಪು) ಅಡಿಯಲ್ಲಿರುವ ಆದೇಶಕ್ಕೆ ಸಮಾನವಾಗಿದೆ.
- ಆದ್ದರಿಂದ, ಮಧ್ಯಸ್ಥಿಕೆ ಕಾಯಿದೆಯ ಸೆಕ್ಷನ್ 37 ರ ಅಡಿಯಲ್ಲಿ ತುರ್ತು ಮಧ್ಯಸ್ಥಗಾರರ ಆದೇಶವನ್ನು ಜಾರಿಗೊಳಿಸುವ ಆದೇಶದ ವಿರುದ್ಧ ಯಾವುದೇ ಮೇಲ್ಮನವಿ ಸಲ್ಲಿಸಲಾಗುವುದಿಲ್ಲ.
ಅಮೆಜಾನ್ SIAC ಅನ್ನು ಏಕೆ ಸಂಪರ್ಕಿಸಿತು?
ಒಪ್ಪಂದದಲ್ಲಿರುವ ಪಕ್ಷಗಳು ಸಾಮಾನ್ಯವಾಗಿ ಒಪ್ಪಂದದ ಸಹ ಒಪ್ಪಂದಕ್ಕೆ ಸಹಿ ಹಾಕುತ್ತವೆ, ಅದರಲ್ಲಿ ಈ ಕೆಳಗಿನ ವಿಷಯಗಳನ್ನು ಸ್ಪಷ್ಟ ಪಡಿಸಲಾಗುತ್ತದೆ:
- ಮಧ್ಯಸ್ಥಿಕೆ ನಿರ್ವಹಿಸುವ ಮಧ್ಯಸ್ಥಿಕೆ ಸಂಸ್ಥೆ.
- ಅನ್ವಯವಾಗುವ ನಿಯಮಗಳು.
- ಮಧ್ಯಸ್ಥಿಕೆಯ ಸ್ಥಳ.
ಈ ಸಂದರ್ಭದಲ್ಲಿ ಅಮೆಜಾನ್ ಮತ್ತು ಫ್ಯೂಚರ್ ಗ್ರೂಪ್ ತಮ್ಮ ಒಪ್ಪಂದದ ಅಡಿಯಲ್ಲಿ ತಮ್ಮ ವಿವಾದಗಳನ್ನು SIAC ಗೆ ಉಲ್ಲೇಖಿಸಲು ಒಪ್ಪಿಕೊಂಡಿವೆ, ಆದ್ದರಿಂದ ಒಪ್ಪಂದದ ಪ್ರಕಾರ ಈ ವಿಷಯವನ್ನು ಇತ್ಯರ್ಥಪಡಿಸಲು ಸಿಂಗಾಪುರ್ ಬಹುಶಃ ಸರಿಯಾದ ಸ್ಥಳವಾಗಿದೆ.
SIAC ನಲ್ಲಿ ವಿವಾದವನ್ನು ಹೇಗೆ ತೆಗೆದುಕೊಳ್ಳಲಾಗುತ್ತದೆ? ಅನುಸರಿಸಬೇಕಾದ ವಿಧಾನ ಏನು?
ವಿವಾದವನ್ನು ಪರಿಹರಿಸಲು ಸಿಂಗಾಪುರ್ ಅಂತರರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರಕ್ಕೆ ಉಲ್ಲೇಖಿಸಿದ ನಂತರ, ಪಂಚಾಯಿತಿಯ ನೇಮಕಾತಿ (arbitral tribunal) ಪ್ರಕ್ರಿಯೆ ನಡೆಯುತ್ತದೆ.
ಸಂಯೋಜನೆ: ಸಾಮಾನ್ಯವಾಗಿ, ಮೂರು ಸದಸ್ಯರ ನ್ಯಾಯಪೀಠದ ಸಂದರ್ಭದಲ್ಲಿ, ಎರಡೂ ಪಕ್ಷಗಳು ನ್ಯಾಯಮಂಡಳಿಗೆ ತಲಾ ಒಬ್ಬ ಸದಸ್ಯರನ್ನು ನೇಮಿಸುತ್ತವೆ, ಆದರೆ ಮೂರನೇ ಸದಸ್ಯರನ್ನು ಎರಡು ಪಕ್ಷಗಳು ಜಂಟಿಯಾಗಿ ನೇಮಿಸುತ್ತವೆ ಅಥವಾ ಒಂದು ವೇಳೆ ಎರಡು ಪಕ್ಷಗಳ ಮಧ್ಯೆ ಸಹಮತ ಏರ್ಪಡದಿದ್ದರೆ SIAC ನಿಂದ ಮೂರನೇ ಸದಸ್ಯರನ್ನು ನೇಮಕ ಮಾಡಲಾಗುತ್ತದೆ.
ತುರ್ತು ಮಧ್ಯಸ್ಥಗಾರರ ನೇಮಕಾತಿ:
ಸಾಮಾನ್ಯವಾಗಿ,ಮಧ್ಯಸ್ಥಿಕೆ ನ್ಯಾಯಮಂಡಳಿಯು ನೇಮಕಾತಿಗೆ ಸಮಯ ತೆಗೆದುಕೊಳ್ಳುತ್ತದೆ.
ಆದ್ದರಿಂದ, SIAC ನ ನಿಯಮಗಳ ಅಡಿಯಲ್ಲಿ, ಮುಖ್ಯ ಮಧ್ಯಸ್ಥಿಕೆ ನ್ಯಾಯಾಧೀಶರ ನೇಮಕಾತಿ ಪ್ರಕ್ರಿಯೆಯು ನಡೆಯುತ್ತಿದ್ದರೂ ಸಹ, ಎರಡೂ ಪಕ್ಷಗಳು ತುರ್ತು ಮಧ್ಯಂತರ ಪರಿಹಾರವನ್ನು ಪಡೆಯಲು ತುರ್ತು ಮಧ್ಯಸ್ಥಗಾರನನ್ನು (emergency arbitrator) ನೇಮಿಸುವಂತೆ SIAC ಅನ್ನು ಸಂಪರ್ಕಿಸಬಹುದು.
ಪಕ್ಷಗಳು ಸ್ವಯಂಪ್ರೇರಣೆಯಿಂದ ಆದೇಶವನ್ನು ಒಪ್ಪಿಕೊಳ್ಳದಿದ್ದರೆ ಏನಾಗುತ್ತದೆ?
ಪ್ರಸ್ತುತ ಭಾರತೀಯ ಕಾನೂನಿನ ಅಡಿಯಲ್ಲಿ, ತುರ್ತು ಮಧ್ಯಸ್ಥಗಾರರ ಆದೇಶಗಳನ್ನು ಜಾರಿಗೊಳಿಸಲು ಯಾವುದೇ ತ್ವರಿತ, ಸ್ಪಷ್ಟವಾದ ಕಾರ್ಯವಿಧಾನವಿಲ್ಲ.
ಆದರೆ, ಪಕ್ಷಗಳು ಸ್ವಯಂಪ್ರೇರಣೆಯಿಂದ ತುರ್ತು ಮಧ್ಯಸ್ಥಗಾರರ ತೀರ್ಪನ್ನು ಅನುಸರಿಸುತ್ತವೆ.
- ಆದಾಗ್ಯೂ, ಪಕ್ಷಗಳು ಸ್ವಯಂಪ್ರೇರಣೆಯಿಂದ ಆದೇಶವನ್ನು ಪಾಲಿಸದಿದ್ದರೆ, ಯಾವ ಪಕ್ಷದ ಪರವಾಗಿ ತೀರ್ಪನ್ನು ನೀಡಲಾಗುತ್ತದೆಯೋ ಆ ಪಕ್ಷವು, ಅಂದರೆ ಈ ಪ್ರಕರಣದಲ್ಲಿ ಅಮೆಜಾನ್, ಮಧ್ಯಸ್ಥಿಕೆ ಮತ್ತು ಸಮನ್ವಯ ಕಾಯಿದೆ, 1996 ರ ಸೆಕ್ಷನ್ 9 ರ ಅಡಿಯಲ್ಲಿ (Section 9 of the Arbitration & Conciliation Act, 1996)ಭಾರತದ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿ, ತುರ್ತು ಮಧ್ಯಸ್ಥಗಾರ ನೀಡಿದ ರೀತಿಯ ಪರಿಹಾರಗಳನ್ನು ಪಡೆಯಲು ಮನವಿ ಸಲ್ಲಿಸಬಹುದು.
ಸಿಂಗಾಪುರ ಏಕೆ ಅಂತರರಾಷ್ಟ್ರೀಯ ಮಧ್ಯಸ್ಥಿಕೆಯ ಕೇಂದ್ರವಾಗಿದೆ?
- ಭಾರತದಲ್ಲಿ ಹೂಡಿಕೆ ಮಾಡುವ ವಿದೇಶಿ ಹೂಡಿಕೆದಾರರು ಸಾಮಾನ್ಯವಾಗಿ ಭಾರತೀಯ ನ್ಯಾಯಾಲಯಗಳ ನೀರಸ ಮತ್ತು ಅನಗತ್ಯ ಕಾನೂನು ಪ್ರಕ್ರಿಯೆಗಳಿಂದ ತಪ್ಪಿಸಿಕೊಳ್ಳಲು ಬಯಸುತ್ತಾರೆ.
- ವಿದೇಶಿ ಹೂಡಿಕೆದಾರರು ಸಿಂಗಾಪುರವು ವಿವಾದ ಪರಿಹಾರಕ್ಕೆ ತಟಸ್ಥ ದೇಶವಾಗಿದೆ ಎಂದು ಭಾವಿಸುತ್ತಾರೆ.
- ಸಿಂಗಾಪುರವು ಕಾಲಾನಂತರದಲ್ಲಿ ಅಂತಾರಾಷ್ಟ್ರೀಯ ಮಾನದಂಡಗಳು ಮತ್ತು ಹೆಚ್ಚಿನ ಸಮಗ್ರತೆಯೊಂದಿಗೆ ಕಾನೂನಿನ ನಿಯಮದಿಂದ ನಡೆಸಲ್ಪಡುವ ನ್ಯಾಯವ್ಯಾಪ್ತಿಯನ್ನು ಅಭಿವೃದ್ಧಿ ಪಡಿಸಿದೆ. ಇದು ಮಧ್ಯಸ್ಥಿಕೆ ಪ್ರಕ್ರಿಯೆಯು ತ್ವರಿತವಾಗಿ, ನ್ಯಾಯಯುತವಾಗಿ ಮತ್ತು ನಿಷ್ಪಕ್ಷಪಾತ ವಾಗಿರುತ್ತದೆ ಎಂದು ಹೂಡಿಕೆದಾರರಿಗೆ ವಿಶ್ವಾಸವನ್ನು ನೀಡುತ್ತದೆ.
SIAC ನ 2019 ರ ವಾರ್ಷಿಕ ವರದಿಯ ಪ್ರಕಾರ, ಭಾರತವು ತನ್ನ ಮಧ್ಯಸ್ಥಿಕೆ ಕೇಂದ್ರದ ಉನ್ನತ ಬಳಕೆದಾರರಾಗಿದ್ದು, 485 ಪ್ರಕರಣಗಳನ್ನು SIAC ಗೆ ಉಲ್ಲೇಖಿಸಿದೆ, ನಂತರ ಫಿಲಿಪೈನ್ಸ್ 122, ಚೀನಾ 76 ಮತ್ತು ಅಮೇರಿಕಾ 65 ಪ್ರಕರಣಗಳನ್ನು ಉಲ್ಲೇಖಿಸುವ ಮೂಲಕ ನಂತರದ ಸ್ಥಾನದಲ್ಲಿವೆ.
ಭಾರತವು ಯಾವುದೇ ಅಂತರರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರವನ್ನು ಹೊಂದಿದೆಯೇ?
ಹೌದು. ಭಾರತವು ಈಗ ಮುಂಬೈನಲ್ಲಿ ತನ್ನದೇ ಆದ ಅಂತರರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರವನ್ನು ಹೊಂದಿದೆ.
ಸಿಂಗಾಪುರ ಅಂತರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರದ (SIAC) ಬಗ್ಗೆ:
ಇದು ಸಿಂಗಾಪುರ ಮೂಲದ ಲಾಭರಹಿತ ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ಸಂಸ್ಥೆಯಾಗಿದೆ, ಇದು ತನ್ನದೇ ಆದ ಮಧ್ಯಸ್ಥಿಕೆ ನಿಯಮಗಳ ಅಡಿಯಲ್ಲಿ ಮತ್ತು ವಿಶ್ವಸಂಸ್ಥೆಯ ಅಂತರರಾಷ್ಟ್ರೀಯ ವ್ಯಾಪಾರ ಕಾನೂನು (UNCITRAL) ಮಧ್ಯಸ್ಥಿಕೆ ಆಯೋಗದ ನಿಯಮಗಳ ಅಡಿಯಲ್ಲಿ ಮಧ್ಯಸ್ಥಿಕೆಗಳನ್ನು ನಿರ್ವಹಿಸುತ್ತದೆ.
ವಿಷಯಗಳು: ಪ್ರಮುಖ ಅಂತರರಾಷ್ಟ್ರೀಯ ಸಂಸ್ಥೆಗಳು, ಏಜೆನ್ಸಿಗಳು ಮತ್ತು ವೇದಿಕೆಗಳು, ಅವುಗಳ ರಚನೆ, ಮತ್ತು ಆದೇಶ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಏಕೆ ಖಾಯಂ ಸ್ಥಾನ ನೀಡಬೇಕು?
(Why should India be given a permanent seat at UNSC?
ಸಂದರ್ಭ:
ಬೈಡೆನ್ ನೇತೃತ್ವದ ಯುಎಸ್ ಆಡಳಿತವು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಕಾಯಂ ಸದಸ್ಯತ್ವಕ್ಕಾಗಿ ಭಾರತದ ಉಮೇದುವಾರಿಕೆಗೆ ಬೆಂಬಲ ನೀಡುವ ಕುರಿತು ಯಾವುದೇ ಬದ್ಧತೆಯನ್ನು ತೋರಿಲ್ಲ.
ಆದಾಗ್ಯೂ, ಒಬಾಮಾ ಮತ್ತು ಟ್ರಂಪ್ ಆಡಳಿತಗಳು ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಶಾಶ್ವತ ಸ್ಥಾನವನ್ನು ನೀಡುವ ಕುರಿತು ಬೆಂಬಲವನ್ನು ಸೂಚಿಸಿದ್ದವು.
ಅಮೇರಿಕಾದ ದೃಷ್ಟಿಕೊನವೇನು?
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ವಿಸ್ತರಣೆಗೆ ಒಮ್ಮತವನ್ನು ನಿರ್ಮಿಸಲು ಶಾಶ್ವತ ಮತ್ತು ಶಾಶ್ವತವಲ್ಲದ ಸದಸ್ಯರ ವಿಷಯದಲ್ಲಿ ಯುಎಸ್ ಅರ್ಹ ಬೆಂಬಲವನ್ನು ನೀಡಿದೆ. ಆದಾಗ್ಯೂ,ಪ್ರಸ್ತುತ ಐದು ಖಾಯಂ ಸದಸ್ಯರಿಗೆ (P -5) ಅಂದರೆ ಚೀನಾ, ಫ್ರಾನ್ಸ್, ರಷ್ಯಾ, ಯುಕೆ ಮತ್ತು ಅಮೆರಿಕ ಗಳಿಗೆ ನೀಡಲಾದ ವೀಟೋ ಅಧಿಕಾರದ ವಿಸ್ತರಣೆಯನ್ನು ಬೆಂಬಲಿಸುವುದಿಲ್ಲ ಎಂದು ಅಮೆರಿಕ ಹೇಳಿದೆ:
ಭಾರತದ ಉಮೇದುವಾರಿಕೆಯನ್ನು ಬೇರೆ ಯಾರು ವಿರೋಧಿಸಿದ್ದಾರೆ?
ಒಮ್ಮತಕ್ಕಾಗಿ ಏಕೀಕರಣದ(Uniting for Consensus (UFC) group) ಗುಂಪಾದ – ಪಾಕಿಸ್ತಾನ, ದಕ್ಷಿಣ ಕೊರಿಯಾ, ಇಟಲಿ ಮತ್ತು ಅರ್ಜೆಂಟೀನಾ ಗಳು ಜಿ 4 ಯೋಜನೆಯನ್ನು ವಿರೋಧಿಸುತ್ತಿವೆ. ಚೀನಾ ಸಹ ಭಾರತ ಮತ್ತು ಜಪಾನ್ ಗಳ ಉಮೇದುವಾರಿಕೆಯನ್ನು ವಿರೋಧಿಸುತ್ತಿದೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತದ ಖಾಯಂ ಸದಸ್ಯತ್ವಕ್ಕಾಗಿ ಪ್ರಮುಖ ಅಂಶಗಳು:
- ಭಾರತವು, ವಿಶ್ವಸಂಸ್ಥೆಯ ಸ್ಥಾಪಕ ಸದಸ್ಯ ದೇಶವಾಗಿದೆ.
- ಅತ್ಯಂತ ಮುಖ್ಯವಾದ ವಿಷಯವೆಂದರೆ, ಭಾರತವು ವಿವಿಧ ಕಾರ್ಯಾಚರಣೆಗಳಲ್ಲಿ ನಿಯೋಜಿಸಿರುವ ಶಾಂತಿಪಾಲಕರ ಸಂಖ್ಯೆಯು, P5 ದೇಶಗಳಿಗಿಂತ ಸುಮಾರು ಎರಡು ಪಟ್ಟು ಹೆಚ್ಚಾಗಿದೆ.
- ಭಾರತವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಮತ್ತು ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿದೆ.
- ಭಾರತವು ಮೇ 1998 ರಲ್ಲಿ ಪರಮಾಣು ಶಸ್ತ್ರಾಸ್ತ್ರ ರಾಷ್ಟ್ರದ (Nuclear Weapons State – NWS) ಸ್ಥಾನಮಾನವನ್ನು ಪಡೆಯಿತು.ಮತ್ತು ಅಸ್ತಿತ್ವದಲ್ಲಿರುವ ಖಾಯಂ ಸದಸ್ಯರಂತೆಯೇ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿದೆ.ಈ ಆಧಾರದ ಮೇಲೆ ಭಾರತವು ಭದ್ರತಾ ಮಂಡಳಿಯಲ್ಲಿ ಶಾಶ್ವತ ಸದಸ್ಯತ್ವಕ್ಕಾಗಿ ಸ್ವಾಭಾವಿಕ ಹಕ್ಕುದಾರನಾಗುತ್ತದೆ.
- ಭಾರತವು ತೃತೀಯ ಜಗತ್ತಿನ ರಾಷ್ಟ್ರಗಳ ನಿರ್ವಿವಾದ ನಾಯಕ ದೇಶವಾಗಿದೆ ಮತ್ತು ಇದು ‘ಅಲಿಪ್ತ ಚಳುವಳಿ’ ಮತ್ತು ಜಿ -77 ಗುಂಪಿನಲ್ಲಿ ಭಾರತ ನಿರ್ವಹಿಸಿದ ನಾಯಕತ್ವದ ಪಾತ್ರದಲ್ಲಿ ಇದು ಸ್ಪಷ್ಟವಾಗಿ ಪ್ರತಿಫಲಿಸುತ್ತದೆ.
- ಉದಯೋನ್ಮುಖ ಆರ್ಥಿಕ ದೇಶ.
ಜಿ 4 ರಾಷ್ಟ್ರಗಳು ಯಾವುವು?
ಬ್ರೆಜಿಲ್, ಜರ್ಮನಿ, ಭಾರತ ಮತ್ತು ಜಪಾನ್ ಅನ್ನು ಒಳಗೊಂಡ ಜಿ 4 ರಾಷ್ಟ್ರಗಳು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಶಾಶ್ವತ ಸ್ಥಾನಗಳಿಗಾಗಿ ಪರಸ್ಪರರ ಉಮೇದುವಾರಿಕೆಗಳನ್ನು ಅಥವಾ ಹಕ್ಕುಗಳನ್ನು ಬೆಂಬಲಿಸುವ ನಾಲ್ಕು ದೇಶಗಳಾಗಿವೆ.
ಈ ಬೇಡಿಕೆಗಳಿಗೆ ಆಧಾರ:
- ವಿಶ್ವಸಂಸ್ಥೆಯ ಸ್ಥಾಪನೆಯಾದ ನಂತರ ಈ ನಾಲ್ಕು ದೇಶಗಳಲ್ಲಿ ಪ್ರತಿಯೊಂದೂ ಭದ್ರತಾ ಮಂಡಳಿಯ ಚುನಾಯಿತ ಶಾಶ್ವತವಲ್ಲದ ಸದಸ್ಯರಾಗಿ ಆಯ್ಕೆಗೊಂಡಿದೆ.
- ಕಳೆದ ದಶಕಗಳಲ್ಲಿ ಈ ದೇಶಗಳ ಆರ್ಥಿಕ ಮತ್ತು ರಾಜಕೀಯ ಪ್ರಭಾವವು ಗಮನಾರ್ಹವಾಗಿ ಬೆಳೆದಿದೆ, ಭದ್ರತಾ ಮಂಡಳಿಯ ಶಾಶ್ವತ ಸದಸ್ಯರಿಗೆ (P5) ಹೋಲಿಸಬಹುದಾದ ಮಟ್ಟವನ್ನು ತಲುಪಿವೆ.
ಸಾಮಾನ್ಯವಾಗಿ, ಪ್ರಸ್ತುತ ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಯಾವ ಸುಧಾರಣೆಗಳು ಅಗತ್ಯವಾಗಿವೆ?
- ಈ ದೇಶಗಳಿಗೆ ಭದ್ರತಾ ಮಂಡಳಿಯಲ್ಲಿ ಖಾಯಂ ಸ್ಥಾನಗಳನ್ನು ನೀಡಬೇಕು.
- ಭದ್ರತಾ ಮಂಡಳಿಯನ್ನು ಹೆಚ್ಚು ನ್ಯಾಯಸಮ್ಮತ, ಪರಿಣಾಮಕಾರಿ ಮತ್ತು ಪ್ರತಿನಿಧಿಯಾಗಿ ಮಾಡಲು ಅಭಿವೃದ್ಧಿಶೀಲ ರಾಷ್ಟ್ರಗಳ ಮತ್ತು ವಿಶ್ವಸಂಸ್ಥೆಯ ಪ್ರಮುಖ ಕೊಡುಗೆದಾರರ ವರ್ಧಿತ ಪಾತ್ರದ ಸ್ಪಷ್ಟ ಅವಶ್ಯಕತೆಯಿದೆ.
- ಆಫ್ರಿಕಾ ಖಂಡದ ವಿರುದ್ಧದ ಐತಿಹಾಸಿಕ ಅನ್ಯಾಯವನ್ನು ಸರಿಪಡಿಸಲು ಆಫ್ರಿಕಾವನ್ನು ಶಾಶ್ವತ ಮತ್ತು ಶಾಶ್ವತವಲ್ಲದ ವಿಭಾಗಗಳಲ್ಲಿ ಅದರ ಕಡಿಮೆ ಪ್ರಾತಿನಿಧ್ಯಕ್ಕೆ ಸಂಬಂಧಿಸಿದಂತೆ ಪ್ರತಿನಿಧಿಸಬೇಕಾಗಿದೆ.
- ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸುಧಾರಣೆಗೆ ನಿಗದಿತ ಕಾಲಮಿತಿಯೊಳಗೆ ಪಠ್ಯ ಆಧಾರಿತ ಮಾತುಕತೆಯ ಅಗತ್ಯವಿದೆ.
ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:
ಕೇಂದ್ರೀಯ ವಿಶ್ವವಿದ್ಯಾಲಯ (ತಿದ್ದುಪಡಿ) ಮಸೂದೆ 2021.
(Central University (Amendment) Bill 2021)
ಕೇಂದ್ರೀಯ ವಿಶ್ವವಿದ್ಯಾಲಯಗಳು (ತಿದ್ದುಪಡಿ) ಮಸೂದೆ 2021 ಅನ್ನು ಲೋಕಸಭೆಯಲ್ಲಿ ಅನುಮೋದಿಸಲಾಗಿದೆ. ಇದರ ಮೂಲಕ ಕೇಂದ್ರೀಯ ವಿಶ್ವವಿದ್ಯಾಲಯಗಳ ಕಾಯ್ದೆ, 2009 ಕ್ಕೆ ತಿದ್ದುಪಡಿ ತರಲು ಉದ್ದೇಶಿಸಿದ್ದು, ಕೇಂದ್ರಾಡಳಿತ ಪ್ರದೇಶವಾದ ಲಡಾಖ್ನಲ್ಲಿ ಕೇಂದ್ರಿಯ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಲು ಅವಕಾಶ ಒದಗಿಸುತ್ತದೆ.
ಕೇಂದ್ರೀಯ ವಿಶ್ವವಿದ್ಯಾನಿಲಯದ ಸ್ಥಾಪನೆಯು (ಸಿಂಧು ವಿಶ್ವವಿದ್ಯಾಲಯ ಎಂದು ಹೆಸರಿಸಲಾಗುವುದು) ಲಡಾಖ್ನಲ್ಲಿ ವಿದ್ಯಾರ್ಥಿಗಳು ತಮ್ಮ ಉನ್ನತ ವ್ಯಾಸಂಗವನ್ನು ಸುಲಭವಾಗಿ ಮಾಡಲು ಅನುವು ಮಾಡಿಕೊಡುತ್ತದೆ ಮತ್ತು ಮುಂಬರುವ ವರ್ಷಗಳಲ್ಲಿ ಪ್ರಾದೇಶಿಕ ಆಕಾಂಕ್ಷೆಗಳನ್ನು ಪೂರೈಸುತ್ತದೆ.
ದಯವಿಟ್ಟು ಗಮನಿಸಿ: ಭಾರತದಲ್ಲಿ ಕೇಂದ್ರೀಯ ವಿಶ್ವವಿದ್ಯಾಲಯಗಳು ಅಥವಾ ಯೂನಿಯನ್ ವಿಶ್ವವಿದ್ಯಾಲಯಗಳು ಸಂಸತ್ತಿನ ಕಾಯಿದೆಯಿಂದ ಸ್ಥಾಪಿಸಲ್ಪಟ್ಟಿವೆ ಮತ್ತು ಶಿಕ್ಷಣ ಸಚಿವಾಲಯದಲ್ಲಿ ಉನ್ನತ ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿವೆ ಎಂಬುದನ್ನು ದಯವಿಟ್ಟು ಗಮನಿಸಿ.
ಖೇಲ್ ರತ್ನಕ್ಕೆ ಧ್ಯಾನ್ ಚಂದ್ ಹೆಸರಿಡಲಾಗಿದೆ:
(Khel Ratna named after Dhyan Chand)
ಹಾಕಿ ಮಾಂತ್ರಿಕನ ಗೌರವಾರ್ಥವಾಗಿ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯನ್ನು “ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ” ಪ್ರಶಸ್ತಿ ಎಂದು ಮರುನಾಮಕರಣ ಮಾಡಲಾಗಿದೆ.
ಮೂರು ಬಾರಿ ಒಲಿಂಪಿಕ್ ಚಿನ್ನದ ಪದಕ ವಿಜೇತ ಧ್ಯಾನ್ ಚಂದ್ ಅವರನ್ನು ಭಾರತದ ಶ್ರೇಷ್ಠ ಹಾಕಿ ಆಟಗಾರ ಎಂದು ಪರಿಗಣಿಸಲಾಗಿದೆ. ಅವರ ಜನ್ಮದಿನವಾದ ಆಗಸ್ಟ್ 29 ರಂದು ರಾಷ್ಟ್ರೀಯ ಕ್ರೀಡಾ ದಿನವನ್ನು ಆಚರಿಸಲಾಗುತ್ತದೆ, ಪ್ರತಿ ವರ್ಷ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳನ್ನು ಈ ದಿನದಂದು ವಿತರಿಸಲಾಗುತ್ತದೆ.
ಖೇಲ್ ರತ್ನ ಪ್ರಶಸ್ತಿಯು, ನಾಲ್ಕು ವರ್ಷಗಳ ಅವಧಿಯಲ್ಲಿ ಕ್ರೀಡಾಪಟುಗಳು ತೋರಿದ ಅದ್ಭುತ ಮತ್ತು ಅತ್ಯುತ್ತಮ ಕಾರ್ಯಕ್ಷಮತೆಗಾಗಿ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯವು ನೀಡುವ ಅತ್ಯುನ್ನತ ಕ್ರೀಡಾ ಪ್ರಶಸ್ತಿಯಾಗಿದೆ.
ಹಿಜ್ಬುಲ್ಲಾ:
(Hezbollah)
ಹಿಜ್ಬುಲ್ಲಾ ಎಂಬುದು ಒಂದು ಶಿಯಾ ಇಸ್ಲಾಮಿಸ್ಟ್ ರಾಜಕೀಯ ಪಕ್ಷವಾಗಿದ್ದು ಅದು ಲೆಬನಾನ್ ನಲ್ಲಿ ನೆಲೆಗೊಂಡಿದೆ.1980 ರ ದಶಕದಲ್ಲಿ ಇರಾನಿನ ಪ್ರಯತ್ನದಿಂದ ಲೆಬನಾನಿನ ಶಿಯಾ ಗುಂಪುಗಳನ್ನು ಒಟ್ಟುಗೂಡಿಸಲು ಈ ಸಂಸ್ಥೆಯನ್ನು ಸ್ಥಾಪಿಸಲಾಯಿತು. ಪ್ರಸ್ತುತ, ನಡೆಯುತ್ತಿರುವ ಇರಾನ್-ಇಸ್ರೇಲ್ ಸಂಘರ್ಷಗಳಲ್ಲಿ, ಹಿಜ್ಬುಲ್ಲಾ ಇರಾನ್ಗೆ ಪ್ರಾಕ್ಸಿಯಾಗಿ ಕಾರ್ಯನಿರ್ವಹಿಸುತ್ತಿದೆ.
ಪಾನಿ ಮಾಹ್:
(Pani Maah)
- ಕೇಂದ್ರಾಡಳಿತ ಪ್ರದೇಶವಾದ ಲಡಾಖ್ ಕೇಂದ್ರಾಡಳಿತ ಪ್ರದೇಶದವು, ಜಲ ಜೀವನ ಮಿಷನ್ ಅನುಷ್ಠಾನದ ವೇಗವನ್ನು ಹೆಚ್ಚಿಸಲು ಮತ್ತು ಶುದ್ಧ ನೀರಿನ ಮಹತ್ವವನ್ನು ತಿಳಿಸಲು ಮತ್ತು ಗ್ರಾಮ ಸಮುದಾಯವನ್ನು ತೊಡಗಿಸಿಕೊಳ್ಳಲು ಒಂದು ತಿಂಗಳ ಅವಧಿಯ ಅಭಿಯಾನ-‘ಪಾಣಿ ಮಾಹ್’ (Pani Maah- ತಿಂಗಳು) ಆರಂಭಿಸಿದೆ.
- ಈ ಪಾನಿ ಅಭಿಯಾನವು ಬ್ಲಾಕ್ ಮತ್ತು ಪಂಚಾಯತ್ ಮಟ್ಟದಲ್ಲಿ ಎರಡು ಹಂತಗಳಲ್ಲಿ ನಡೆಯಲಿದೆ.
- ಈ ಅಭಿಯಾನವು ಮೂರು-ದಿಕ್ಕಿನ ವಿಧಾನವನ್ನು ಅಳವಡಿಸಿಕೊಳ್ಳುತ್ತದೆ-ನೀರಿನ ಗುಣಮಟ್ಟ ಪರೀಕ್ಷೆ, ನೀರು ಸರಬರಾಜು ಯೋಜನೆ ಮತ್ತು ಹೆಚ್ಚಿನ ಕಾರ್ಯತಂತ್ರ ಮತ್ತು ಹಳ್ಳಿಗಳಲ್ಲಿ ಪಾನಿ ಸಭೆಯ ತಡೆರಹಿತ ಕಾರ್ಯನಿರ್ವಹಣೆಯ ಮೇಲೆ ಗಮನ ಕೇಂದ್ರೀಕರಿಸುವುದು.
Join our Official Telegram Channel HERE for Motivation and Fast Updates
Subscribe to our YouTube Channel HERE to watch Motivational and New analysis videos